29ರಿಂದ ಉಚಿತ ಯೋಗ ಶಿಬಿರ


ಕುಂದಾಪುರ: ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಪೀಠ ಉಡುಪಿ- ಕುಂದಾಪುರ, ಚೇತನಾ ಕಲಾರಂಗ, ರೋಟರಿ ಕ್ಲಬ್ ಕೋಟೇಶ್ವರ ಸಂಯುಕ್ತ ಆಶ್ರಯದಲ್ಲಿ ಮೇ 29ರಿಂದ ಜೂ.2ರತನಕ ಪ್ರತಿದಿನ ಬೆಳಗ್ಗೆ 5.30ರಿಂದ 7ರತನಕ ಕೋಟೇಶ್ವರ ಸರ್ಕಾರಿ ಮಾದರಿ ಹಿ.ಪ್ರಾಥಮಿಕ ಶಾಲೆಯ ಮಹಾಲಕ್ಷ್ಮೀ ಮಧ್ವರಾಯ ಸಭಾಭವನದಲ್ಲಿ ಪ್ರಾಣಾಯಾಮ, ಧ್ಯಾನ ಮತ್ತು ರೋಗಕ್ಕೆ ಆಯುರ್ವೇದ ಸಲಹೆಯೊಂದಿಗೆ ಉಚಿತ ಯೋಗ ಶಿಬಿರ ನಡೆಯಲಿದೆ. ಆಸಕ್ತರು ಶಿಬಿರಕ್ಕೆ ಬರುವಾಗ ಬೆಡ್ ಶೀಟ್, ಕರವಸ್ತ್ರವನ್ನು ತಾವೇ ತರಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಪ್ರಕಾಶ್ ಉಪಾಧ್ಯಾಯ(9449865301) ಅವರನ್ನು ಸಂಪರ್ಕಿಸಬಹುದು.

ಕುಂದಾಪ್ರ ಡಾಟ್ ಕಾಂ - editor@kundapra.com

26ಕ್ಕೆ ಸಿದ್ದಾಪುರದಲ್ಲಿ 'ಲಗ್ನಾ ಪಿಶ್ಯೆಂ'- ಕೊಂಕಣಿ ಹಾಸ್ಯ ನಾಟಕ


ಕುಂದಾಪುರ: ಮುಂಬೈ ನಗರದಲ್ಲಿ ಜಯಭೇರಿ ಭಾರಿಸಿದ ಬಾಲಕೃಷ್ಣ ಪುರಾಣಿಕ್ ಬರೆದ 'ಲಗ್ನಾ ಪಿಶ್ಯೆಂ' ಎಂಬ ಕೊಂಕಣಿ ಹಾಸ್ಯ ನಾಟಕದ 4 ಪ್ರದರ್ಶನಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 25ರಿಂದ 28ರವರೆಗೆ ಆಯೋಜಿಸಲಾಗಿದೆ.
ಲಿಮ್ಕಾ ದಾಖಲೆ ಖ್ಯಾತಿಯ ಹಾಸ್ಯ ರಂಗನಟ ಕಮಲಾಕ್ಷ ಸರಾಫ, ಲಿಮ್ಕಾ ದಾಖಲೆ ಖ್ಯಾತಿಯ ನಿರ್ದೇಶಕ ಡಾ. ಚಂದ್ರಶೇಖರ್ ಶೆಣೈ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಎ.ಜಿ. ಕಾಮತ್, ಲಿಮ್ಕಾ ಖ್ಯಾತಿಯ ಬೆಳಕು ಸಂಯೋಜಕ ಗಣಪತಿ ಕಾಮತ್ ಹಾಗೂ ಇನ್ನಿತರರ ಕಲಾವಿದರಿರುವ ಮುಂಬೈಯ ವಡಾಲದ ರಾಮಸೇವಕ ಸಂಘ ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.
ಮೇ 25ರಂದು ಕಾರ್ಕಳದ ಮಿಯಾರು ಗೋವಿಂದ ಪೈ ಸ್ಮಾರಕ ಹಾಲ್ ಮತ್ತು ಮಂಗಳೂರಿನ ಉರ್ವಾದ ಕೆನರಾ ಹೈಸ್ಕೂಲ್, 26ರಂದು ಕುಂದಾಪುರದ ಸಿದ್ದಾಪುರದ ಕೆಳಪೇಟೆಯ ರಂಗನಾಥ ಸಭಾ ಭವನ, ಮೇ 27ರಂದು ಉಡುಪಿಯ ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನ ಭುವನೇಂದ್ರ ರಂಗಮಂಟಪದಲ್ಲಿ, 28ರಂದು ಗಂಗೊಳ್ಳಿಯ ಮಲ್ಯರ ಮಠದ ದ್ವಾರಕಾನಾಥ ರಂಗಮಂಟಪದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.  

ಕುಂದಾಪ್ರ ಡಾಟ್ ಕಾಂ - editor@kundapra.com

ಕೊಲ್ಲೂರಿನ ದೇವಳಕ್ಕೆ ಬಿದರಿ ಬೆಳ್ಳಿಯ ಖಡ್ಗ ಸಮರ್ಪಣೆ


 ಬೈಂದೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕೆಗೆ ನವರತ್ನ ಖಚಿತ ಬೆಳ್ಳಿಯ ಖಡ್ಗ ಸಮರ್ಪಿಸಿದರು.
ಶ್ರೀ ಕ್ಷೇತ್ರ ಕೊಲ್ಲೂರಿಗೆ  ಆಗಮಿಸಿ ಖಡ್ಗವನ್ನು ದೇವಿಗೆ ಅರ್ಪಿಸಿ ದರ್ಶನ ಪಡೆದು ಮಾತನಾಡಿದ ಅವರು ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಿಗೂ ಒಂದು ಖಡ್ಗ ನೀಡಿರುವುದಾಗಿ ತಿಳಿಸಿದರಲ್ಲದೇ ಸಂಜೆ ಕಾರ್ಕಳ ಶ್ರೀ ವೆಂಕಟರಮಣ ದೇವರಿಗೆ ಗಧೆಯನ್ನು ಅರ್ಪಿಸುವುದಾಗಿ ತಿಳಿಸಿದರು. ಸಾರ್ವಜನಿಕರಿಂದ ಬಂದ ವಸ್ತುಗಳು ದೇವರಿಗೆ ಸಲ್ಲಬೇಕೆನ್ನುವುದೇ ನನ್ನ ಆಶಯವಾಗಿತ್ತು ಎಂದರು.
    ಮುಂದಿನ ಲೋಕಸಭೆಗೆ ಕಾಂಗ್ರೇಸ್‌ನಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿದರಿ, ನನ್ನ ಜೀವನದಲ್ಲಿ ಏನನ್ನೂ ಯಾರಿಂದಲೂ ಕೇಳಿ ಪಡೆದಿಲ್ಲ. ಪಕ್ಷ, ಸಮಾಜ, ದೇಶ ನನ್ನನ್ನು ಯಾವ ರೀತಿಯಾಗಿ ಬಳಸಿ ಕೊಳ್ಳುತ್ತದೋ ಅದರಂತೆ ಮುಂದುವರಿಯುವೆ ವಿನಹ ಯಾವುದಕ್ಕೂ ಲಾಬಿ ಮಾಡುವ ಉದ್ದೇಶವಾಗಲೀ ಅವಶ್ಯಕತೆಯಾಗಲೀ ನನಗಿಲ್ಲ ಎಂದರಲ್ಲದೇ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ರಾಜ್ಯಭಾರ ಮಾಡುವುದಲ್ಲದೇ, ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯನ್ನು, ಅಭಿವೃದ್ಧಿಯನ್ನು ನೂತನ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲಾ ಮಂತ್ರಿಗಳು ಹಾಗೂ ಶಾಸಕರೂ ಸೇರಿ ಈಡೇರಿಸುವ ವಿಶ್ವಾಸವಿದೆ ಎಂದರು.
 ಕುಟುಂಬಿಕರೊಡಗೂಡಿ ಕ್ಷೇತ್ರಕ್ಕೆ ಆಗಮಿಸಿದ್ದ ಬಿದರಿಗೆ ದೇವಳದ ಸಹಾಯಕ ಕಾರ್‍ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಶಾಲು ಹೊದೆಸಿ ಗೌರವಿಸಿದರು. ವೃತ್ತ ನೀರಿಕ್ಷಕ ಅರುಣ ಬಿ.ನಾಯಕ್, ಕೊಲ್ಲೂರು ಠಾಣಾಧಿಕಾರಿ ದೇವೇಂದ್ರ, ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com

ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ಸೊರಕೆ

ಕೊಲ್ಲೂರು: ಕೊಲ್ಲೂರಿನ ಸಮಗ್ರ ಅಭಿವೃದ್ಧಿಗೆ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರೊಡನೆ ಶ್ರಮಿಸುವುದಾಗಿ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದ್ದಾರೆ.
       ಬೆಳಗ್ಗೆ ಶ್ರೀ ದೇವಿಯ ದರ್ಶನ ಪಡೆದ ಅನಂತರ ಶ್ರೀ ವೀರಭದ್ರ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,  ಕೊಲ್ಲೂರಿನ ಮೂಲ ಸೌಕರ್ಯಗಳಾದ ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
      ತಾನು ಚುನಾವಣೆಗೆ ಸ್ಪರ್ಧಿಸುವ ಮೊದಲು ದೇವಿಯ ಆಶೀರ್ವಾದ ಪಡೆದಿದ್ದೆ. ತನ್ನ ಗೆಲುವಿಗೆ ಹಾಗೂ ಸಚಿವನಾಗಲು ಮೂಕಾಂಬಿಕೆಯ ಆಶೀರ್ವಾದ ಕಾರಣ ಎಂದ ಅವರು
       ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರೊಡನೆ ಚರ್ಚಿಸಿ ಆ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಅವರು ತಿಳಿಸಿದರು.
ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ನಡೆಸಿಲ್ಲ. ಕೇಂದ್ರದ ಮುಖಂಡರು ಹಾಗೂ ರಾಜ್ಯದ ವರಿಷ್ಠರು ಆ ಸ್ಥಾನ ನೀಡಿದ್ದಾರೆ. ಸಂತೋಷದಿಂದ ಸ್ವೀಕರಿಸಿದ್ದು, ಸಿದ್ಧರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಪ್ರಾಮಾಣಿಕ ಸೇವೆ ಮಾಡುವುದಾಗಿ ತಿಳಿಸಿದರು.
   ದೇವಳದ ಆಡಳಿತ ಧರ್ಮದರ್ಶಿ ಕೃಷ್ಣ ಪ್ರಸಾದ್‌ ಅಡ್ಯಂತಾಯ, ಧರ್ಮದರ್ಶಿ ಜಯಾನಂದ ಹೋಬಳಿದಾರ್‌, ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಗಾಣಿಗ, ಉದ್ಯಮಿ ಕಾಪು ವಾಸುದೇವ ಶೆಟ್ಟಿ, ಪಿ.ಎಲ್‌. ಜೋಶ್‌ ಮೊದಲಾದವರು ಉಪಸ್ಥಿತರಿದ್ದರು.

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್‌ ಅಡ್ಯಂತಾಯ ಅವರು ಸಚಿವ ಸೊರಕೆ ಅವರನ್ನು ಸಮ್ಮಾನಿಸಿ, ಗೌರವಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com

ಕೋಳಿ ಸಾಕಣೆ ತರಬೇತಿ: ಅರ್ಜಿ ಆಹ್ವಾನ


ಬ್ರಹ್ಮಾವರ: ಇಲ್ಲಿನ ರುಡ್‌ಸೆಟ್ ಸಂಸ್ಥೆ ವತಿಯಿಂದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಬರುವ 18ರಿಂದ 45 ವರ್ಷ ವಯೋವುತಿಯೊಳಗಿನ, ಸ್ವಉದ್ಯೋಗ ಮಾಡಲು ಆಸಕ್ತಿ ಉಳ್ಳ ನಿರುದ್ಯೋಗಿ ಯುವಕ- ಯುವತಿಯರಿಗಾಗಿ ಕೋಳಿ ಸಾಕಣೆ ತರಬೇತಿ ಜೂ.10ರಿಂದ 15ರವರೆಗೆ ಮತ್ತು ಹೈನುಗಾರಿಕೆ ತರಬೇತಿ ಜೂ.17ರಿಂದ 22ರವರೆಗೆ ಆಯೋಜಿಸಲಾಗಿದೆ. ತರಬೇತಿಯಲ್ಲಿ ಸಂಬಂಧಪಟ್ಟ ವಿಷಯದೊಂದಿಗೆ ಉದ್ಯಮ ನಿರ್ವಹಣೆ ಮತ್ತು ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರು ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆ, ಪಡೆಯಲಿಚ್ಛಿಸುವ ತರಬೇತಿ ವಿವರಗಳೊಂದಿಗೆ ಅರ್ಜಿಯನ್ನು ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೇ ಹೆರೂರು, ಬ್ರಹ್ಮಾವರ, ಉಡುಪಿ ಜಿಲ್ಲೆ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ದೂ.ಸಂಖ್ಯೆ 0820- 2563455 ಸಂಪರ್ಕಿಸಬಹುದು ಎಂದು ರುಡ್‌ಸೆಟ್ ಸಂಸ್ಥೆ ನಿರ್ದೇಶಕ ವಿಜಯಕುಮಾರ ನೆರ್ಲೇಕರ್ ತಿಳಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com

ಪ್ರಕೃತಿ ಆರಾಧನೆಯಿಂದ ಭಗವಂತ ಸಂತುಷ್ಟ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ


ಕುಂದಾಪುರ: ಪ್ರಕೃತಿ ಪ್ರಿಯನಾದ ನಾಗನ ಆರಾಧನೆಗಾಗಿ ಪ್ರಕೃತಿಯನ್ನು ಉಳಿಸಿಕೊಂಡು ಪ್ರಕೃತಿ ತತ್ವ ದೇವತಾರಾಧನೆ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಆರಾಧನೆಗಳ ಮೂಲಕ ಬದುಕನ್ನು ಹಸನಾಗಿಸಬಹುದಾಗಿದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
     ಅವರು ಕೋಟೇಶ್ವರದ ತೆಂಕಬೈಲು, ಕುಂಬ್ರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ 'ನಾಗಯಕ್ಷಿ' ಬನದ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ಸಭೆಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ತಲೆಮಾರುಗಳಿಂದ ಪೂಜಿಸಿಕೊಂಡು ಹಾಗೂ ನಂಬಿಕೊಂಡು ಬಂದಿರುವ ದೈವಾನುದೇವತೆಗಳ ಆರಾಧನಾ ಕಾರ್ಯವನ್ನೂ ನಾವೆಲ್ಲರೂ ಎಂದಿಗೂ ಮರೆಯಬಾರದು. ಇದರಿಂದ ದೋಷಾದಿ ಸಮಸ್ಯೆಗಳು ಕಾಡುವುದು ಖಚಿತ. ದೈವ ಪ್ರೇರಣೆ ಸಿಗುವಂತಹ ಸಂದರ್ಭದಲ್ಲಿ ವ್ಯಕ್ತಿಗೆ ಅತೀಂದ್ರಿಯ ಶಕ್ತಿಯ ಅನುಗ್ರಹವಾಗುತ್ತದೆ. ಶಿಥಿಲಾವಸ್ಥೆಯಲ್ಲಿರುವ ಶ್ರದ್ಧಾ ಕೇಂದ್ರಗಳನ್ನು ಸುವ್ಯವಥಿತಗೊಳಿಸುವ ಮೂಲಕ ಶ್ರದ್ಧಾ ಕೇಂದ್ರಗಳಲ್ಲಿ ಎಲ್ಲರಿಗೂ ಆರಾಧಿಸಲು ಅವಕಾಶ ಮಾಡಿಕೊಡುವುದರಿಂದ ಪ್ರಕೃತಿದತ್ತ ದೈವಾರಾಧನೆ ನಡೆಸಿ ಪ್ರತಕೃತಿಯೊಳಗಿನ ಭಗವಂತನನ್ನು ಸಂತುಷ್ಟಗೊಳಿಸುವ ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.
      ಶ್ರೀ ನಾಗಯಕ್ಷಿ ಬನ ಸಮಿತಿಯ ಅಧ್ಯಕ್ಷ ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕುಂಬ್ರಿ ಚಿಕ್ಕಮ್ಮ ದೇವಸ್ಥಾನದ ವ್ಯವಸ್ಥಾಪನ ಸಮೀತಿ ಅಧ್ಯಕ್ಷ ಜಗನ್ನಾಥ ಹೆಬ್ಬಾರ್,  ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ವಲಯಾಧ್ಯಕ್ಷ ಸತೀಶ, ಎಂಜಿನಿಯರ್ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ವೇದಮೂತರ್ ಬಿ. ರಾಘವೆಂದ್ರ ವರ್ಣ ಬಡಾಕೆರೆ ಹಾಗೂ ಶ್ರೀ ರಾಮಮೂತರ್ ಹೆಬ್ಬಾರ್ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಸ್ಥಳವಕಾಶ ನೀಡಿದವರನ್ನು, ದಾನಿಗಳನ್ನು ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮೊದಲು ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಜನಜಾಗೃತಿ ವೇದಿಕೆ ಕೋಟೇಶ್ವರ ವಲಯಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಸು ಆಚಾರ್ಯ ಪ್ರಾರ್ಥಿಸಿದರು, ಗಣೇಶ ಆಚಾರ್ಯ ಕುಂಬ್ರಿ ಸ್ವಾಗತಿಸಿದರು. ಮಾಲತಿ ಸತೀಶ್ ನಿರೂಪಿಸಿದರು. ಶ್ರೀಧರ ಆಚಾರ್ಯ ಸಿಹಿನಿರ್ತೋಡ್ ವಂದಿಸಿದರು.
ಸುಧಾಕರ ವಕ್ವಾಡಿ

ಕುಂದಾಪ್ರ ಡಾಟ್ ಕಾಂ - editor@kundapra.com
 
© Copyright 2013-14 ಕುಂದಾಪ್ರ ಡಾಟ್ ಕಾಂ | ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com