ಗಂಗೊಳ್ಳಿ: ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದೆ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಗುಣ ನಡತೆ ಬೆಳೆಸಿಕೊಳ್ಳಬೇಕು. ಶಾಲೆಯ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಆದರ್ಶಗಳನ್ನು ಇಟ್ಟುಕೊಂಡು ಸಾಧನೆ ಮಾಡಲು ಸಾಧ್ಯವಿದೆ ಎಂದು ಉಡುಪಿಯ ವೈದ್ಯ ಡಾ.ಶಿವಾನಂದ ನಾಯಕ್ ಹೇಳಿದರು.
ಅವರು ಇಲ್ಲಿನ ಸ.ವಿ.ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಎಬಿವಿಪಿ ಗಂಗೊಳ್ಳಿ ಘಟಕದ ಸಹಕಾರದೊಂದಿಗೆ ಶಾಲೆಯ ಸಭಾಂಗಣದಲ್ಲಿ ಜರಗಿದ ಸ್ವಾಮಿ ವಿವೇಕಾನಂದ 152ನೇ ಜನ್ಮ ದಿನಾಚರಣೆ ಕಾರ್ಯಕ್ರಮಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ದೇಶ ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ದೇಶದ ಅಸ್ಥಿರತೆ ದೂರವಾಗಿ, ದೇಶದ್ರೋಹಿ ಚಟುವಟಿಕೆಗಳು ಕಡಿಮೆಯಾಗುತ್ತಾ ದೇಶದಲ್ಲಿ ಶಾಂತಿ ಸುಭಿಕ್ಷೆ ನೆಲೆಸುತ್ತದೆ. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥತೆ, ಆಧ್ಯಾತ್ಮಿಕತೆ ಬೆಳೆಯಬೇಕು. ದೇಶದ ಬಗ್ಗೆ ಚಿಂತನೆ ಮಾಡುತ್ತಾ, ದೇಶಕ್ಕೆ ಯಾವುದೇ ಆಪತ್ತು ಎದುರಾದಾಗ ದೇಶದ ರಕ್ಷಣೆಗೆ ಎಲ್ಲರೂ ಒಂದಾಗಬೇಕು ಎಂದು ಹೇಳಿದ ಅವರು ಕಾಲೇಜು ಕ್ಯಾಂಪಸ್ ಸುತ್ತಮುತ್ತ ಮಾದಕ ವಸ್ತುಗಳು ಸುಳಿದಾಡದಂತೆ ನೋಡಿಕೊಳ್ಳಬೇಕಿದೆ. ದೇಶವನ್ನು ವ್ಯಸನಮುಕ್ತ ದೇಶವನ್ನಾಗಿ ಮಾಡುವ ಮೂಲಕ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಉಪನ್ಯಾಸಕ ಭಾಸ್ಕರ ಶೆಟ್ಟಿ ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ಎಂ.ಅಮಿತ್ ಪೈ, ಎಬಿವಿಪಿ ಗಂಗೊಳ್ಳಿ ಘಟಕದ ಅಧ್ಯಕ್ಷ ಸುಜೇಂದ್ರ ನಾಯ್ಕ್, ವಿದ್ಯಾರ್ಥಿನಿ ಸುಶ್ಮಿತಾ ಪೂಜಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮಹೇಶ್ ಸ್ವಾಗತಿಸಿ, ನಿಖಿಲ್ ಅತಿಥಿಗಳನ್ನು ಪರಿಚಯಿಸಿದರು. ಅಚಲಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಜಯಂತ್ ಶೇರುಗಾರ್ ವಂದಿಸಿದರು.
0 comments:
Post a Comment