ಕುಂದಾಪುರ: ತಾಪಂ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎಂದು ದೂರಿ ಶುಕ್ರವಾರ ನಡೆದ ಕುಂದಾಪುರ ತಾಪಂ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಸದಸ್ಯರು ಹೊರ ನಡೆದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಡೆಯುತ್ತಿಲ್ಲ. ಉಡುಪಿ ಜಿಲ್ಲಾಧಿಕಾರಿ ತಾಪಂ ವ್ಯವಸ್ಥೆಗೆ ಕಿಂಚಿತ್ತೂ ಗೌರವ ನೀಡುತ್ತಿಲ್ಲ. ಪಂಚಾಯಿತಿರಾಜ್ ಕಾಯಿದೆ 143 ಪ್ರಕಾರ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದ್ದರೂ ಅದಕ್ಕೆ ಬೆಲೆ ಕೊಟ್ಟಿಲ್ಲ. ಕೇವಲ ಸಿಟ್ಟಿಂಗ್ ಫೀಸ್ ಪಡೆಯಲು ನಾವು ಇಲ್ಲಿಗೆ ಬಂದಿಲ್ಲ. ವ್ಯವಸ್ಥೆಗೆ ಅಧಿಕಾರಿಗಳು ಗೌರವ ನೀಡದಿರುವ ಮೇಲೆ ಇಲ್ಲಿ ಕುಳಿತು ಮಾಡುವುದಾದರೂ ಏನು ಎಂದು ಪ್ರಶ್ನಿಸಿದ ತಾಪಂ ಸರ್ವ ಸದಸ್ಯರು ಸಭೆಯಿಂದ ಹೊರ ನಡೆದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, ತಾಪಂ ವ್ಯವಸ್ಥೆಯನ್ನು ಅಧಿಕಾರಿಗಳು ವ್ಯವಸ್ಥಿತವಾಗಿ ಮಟ್ಟ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಕಾಯಿದೆ ಉಲ್ಲಂಘಿಸಿ ಮುನ್ನಡೆಯುತ್ತಿದ್ದಾರೆ. 143 ಸೆಕ್ಷನ್ ಪ್ರಕಾರ ಸಭೆಗೆ ಬಾರದಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಪಂಚಾಯಿತಿರಾಜ್ ಕಾಯಿದೆ 292 ಪ್ರಕಾರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಜಿಲ್ಲಾಧಿಕಾರಿ ಸರ್ವಾಧಿಕಾರಿ ನೀತಿ ಪ್ರದರ್ಶಿಸುತ್ತಿದ್ದಾರೆ. ವಾರಾಹಿ ಯೋಜನೆ, ಕಸ್ತೂರಿ ರಂಗನ್ ವರದಿ ಕುರಿತಂತೆ ಬಹು ದೊಡ್ಡ ಸಮಸ್ಯೆ ಎದುರಾಗಿದ್ದರೂ ಡಿಸಿ ತುಟಿ ಬಿಚ್ಚುತ್ತಿಲ್ಲ. ಡಿಸಿ ಇಲ್ಲಿ ಸರಕಾರದ ಪ್ರತಿನಿಧಿಯಾಗಿ ವರ್ತಿಸುತ್ತಿಲ್ಲ. ಆಡಳಿತ ವ್ಯವಸ್ಥೆಯನ್ನು ಹಗುರವಾಗಿ ಕಾಣುವ ಇಂಥವರ ವಿರುದ್ಧ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದರು.
ತ್ರಿಸ್ತರ ಪಂಚಾಯಿತಿರಾಜ್ ವ್ಯವಸ್ಥೆಯಲ್ಲಿ ಪ್ರಮುಖ ಅಂಗವಾಗಿರುವ ತಾಪಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ಉಡುಪಿ ಜಿಲ್ಲಾಡಳಿತದಿಂದ ನಡೆಯುತ್ತಿದೆ. ಜಿಲ್ಲಾಧಿಕಾರಿ ಯವರೇ ಮುಂದೆ ನಿಂತು ಸಭೆಗೆ ಅಧಿಕಾರಿಗಳು ಹೋಗದಂತೆ ತಡೆಯುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ದೊರೆತ ಅಧಿಕಾರ ಚಲಾಯಿಸಲು, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಇಲ್ಲದ ಮೇಲೆ ತಾಪಂ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ಸರಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಅರಾಜಕತೆ ಸೃಷ್ಟಿಯಾಗುವ ಮೊದಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ಪ್ರದೀಪ್ಚಂದ್ರ ಶೆಟ್ಟಿ, ನಾಡಾ ಶಂಕರ ಶೆಟ್ಟಿ, ಹರ್ಕೂರು ಮಂಜಯ್ಯ ಶೆಟ್ಟಿ, ಕಾಳಾವರ ದೀಪಕ್ ಕುಮಾರ ಶೆಟ್ಟಿ ಒತ್ತಾಯಿಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ನಾಗೇಶ್ ಬೇಳೂರು, ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು.
0 comments:
Post a Comment